Sunday, December 14, 2014

ಹೇ ತುಂತುರೇ...

ಹೇ ತುಂತುರೇ, 
ನೆನೆದರೂ 
ನೀ ತಣಿಸಲಿಲ್ಲ
ಎದೆಯಲ್ಲಿ
ಅವನಿತ್ತ ಬೇಗೆ...!

ಹೇ ಮಲ್ಲಿಗೆಯೇ,
ಕಣ್ಣಲ್ಲೇ ಸೆಣೆಸುವ
ತುಂಟನ
ಕೆನ್ನೆಗೆ ಎರಡು
ತಟ್ಟಾದರೂ ಹೋಗೇ...!!


 

ನನ್ನಲ್ಲೂ ಹಂಬಲವಿದೆ......!!


ಮನಸು ಮನಸುಗಳ
ಬಂಧನಕೆ ಮಿತಿಯ
ಪರಿಧಿಯುಂಟೇ ಹೊಳೆವ ಜಗದಲಿ...
ಒಲವ ಬಳ್ಳಿಯಲಿ....?

ಅತ್ತ ಸಾಗರದಂಚಿಂದ ಮೆಲ್ಲ ಮೆಲ್ಲನೆ ಮೂಡುತ್ತಿದ್ದ ಸೂರ್ಯ
ಅತಿ ಮೆಲ್ಲನೆ ಮೂಡುತ್ತಿದ್ದ ಸೂರ್ಯ...
ಇತ್ತ ಎದೆಯೊಳಗೆ ಮೆಲ್ಲಗೆ ಇಳಿಯುತಿದ್ದ
ಅತಿ ಮೆಲ್ಲಗೆ ಇಳಿದು ಅಲೆಯೆಬ್ಬಿಸುತಿದ್ದ ನನ್ನವ...
ಝಲ್ಲೆನಿಸುತ್ತಿದ್ದ..
ಸೋತೂ, ಸೋತೂ, ಗೆಲ್ಲುತ್ತಿದ್ದ
ಕಣಜದಲಿ ಬಚ್ಚಿಟ್ಟ ಹೃದಯಕೆ
ಕಚ್ಚೀ...ಕಚ್ಚೀ...ಕಚಗುಳಿಯಿಡುತ್ತಿದ್ದ.....

ಮುಟ್ಟದೆಯೇ ಮುದ್ದಿಸುವ ತುಂಟನ
ಕಣ್ಣ ನೋಟಕೆ ನಾಚಿ ನೀರಾದ ವದನ,
ನರನಾಡಿಗಳ ಸೆಳೆತ..
ಪರವಶತೆಯೋ...!!
ಕಾನನದಲಿ ಹರಿವ ಝರಿಯಲಿ ಮಿಂದು
ಮುಡಿಯಿಂದ ಕಾಲ ತುದಿಯವರೆಗೂ ರಮಿಸುತಾ
ಗಟ್ಟಿಯಾಗಿ ಬೆಸೆದ ನಾಗರ ಮಿಲನದಂತೆ.....

ಸೋತೆ ಒಮ್ಮೆ....ಈಗ...!!

ಕಣ್ಣು ಮುಚ್ಚಿದರೂ ಕಣಕಣದಲೂ
ರೋಮಾಂಚನದ ಕುಲುಕು ಸ್ಪರ್ಶ...
ರೋಮ ರೋಮದಲೂ
ಕಾಡುವ ಪ್ರೇಮಿಯ
ಮುತ್ತಿನ ಮೇಳ...
ಕೊಡುವವನೂ ಅವನೇ ನನಗೆ
ಕೊಟ್ಟು ಕೊಳ್ಳುವವನೂ ಅವನೇ
ತನುಮನದ ಒಡೆಯ....
ಪ್ರತಿ ಮುತ್ತಿನ ಖರೀದಿಗೆ ಸಾವಿರ ಮುತ್ತಿನ ಉಡುಗೊರೆ,
ನನ್ನಲ್ಲೂ ಹಂಬಲವಿದೆ......!!

Tuesday, November 18, 2014

ಹೆಜ್ಜೆಯನಿತ್ತಲ್ಲೆಲ್ಲಾ


ಹೆಜ್ಜೆಯನಿತ್ತಲ್ಲೆಲ್ಲಾ ತಣ್ಣನೆ ಝರಿಯ ಹರಿವು
ಸವಿಸಿ ಹೊತ್ತೋಯ್ತು ಪಾದದಡಿಯ ನೆರಳ..
ಕದಡಿ, ಕಲಕಿ
ಮರೆಸಿಹೋಯ್ತು ಮನದ ಮುಗ್ಧತೆಯ...

ಮುಂದೆ ನಡೆದ ಹಾದಿಯಲ್ಲಿ ಸಿಕ್ಕ
ಒರಟುಕಲ್ಲು ತರಚಿಹೋಯ್ತು ಮೊದಲೇ ತೆರೆದ ಗಾಯವ
ಚುಚ್ಚಿ, ನಕ್ಕು
ನೆಕ್ಕಿಹೋಯ್ತು ತಾನೂ ರಕ್ತದ ರುಚಿಯ...

ಕುಂಟು ನಡೆ, ಎಡವು, ಬೀಳು
ಎದ್ದು ಓಡಿದೆ, ಸುಸ್ತಾಗಿ ನಿಂತೆ ದಣಿದು,
ಊರುಗೋಲ ತಡಕು ಮನದಲಿ
ಸುತ್ತಲಿತ್ತು ಬರೀ ಮರಳುಗಾಡ ಮೌನ
ಛಾಯೆ ಸಿಗದೇ, ಬಳಲಿ ಬೆಂಡಾದೆ ಕಗ್ಗತ್ತಲಲ್ಲಿ....
 
 

Saturday, November 8, 2014

ತುಟಿ ಬಿಚ್ಚಿ ಹೇಳದ...



ತುಟಿ ಬಿಚ್ಚಿ ಹೇಳದ
ಮನಗಳ
ಬೆಚ್ಚನೆಯ
ಭಾವಗಳ ಮಿಲನಕೆ
ಹುಣ್ಣಿಮೆಯ ಬೆಳದಿಂಗಳು
ಹೆಣೆದಿತ್ತು
ಸೋಬಾನೆ ಹಾಡ....

ಕುಡಿಮೀಸೆ ಚೆಲುವನ
ನೋಟಕೆ
ದಿಕ್ಕೆಟ್ಟು, ಅವಳ
ಎದೆಹೊಕ್ಕ ಕೋಗಿಲೆ
ಉಸಿರಿಡಿದು ಹಾಡಿತು
ಒಂದೇಸಮನೆ ತಾನಿತಂದಾನ....

ಅವಳಂದ ಚಂದ..
ಅವ ತುಂಟ ಬಂಡ..
ಬಿಡದೆ ಬಂದಿಸಿದ
ಕರವಿಡಿದು ಬರಸೆಳೆದು
ಮುಂಗುರುಳ ಸರಿಸಿ
ಬೇಡಿದ ಮುತ್ತಿನಹಾರ....

ಬಲು ದಾರಾಳಿಯವಳು
ಮೌನ ಬಂಗಾರಿ,
ನಕ್ಕು ಓಡಿದಳು
ಕೈ ಕಿತ್ತು
ಮುತ್ತಿನ ಕೊಪ್ಪರಿಗೆಯನ್ನೇ
ಕೈಗಿಟ್ಟು...
ಇರುವೆಗಳ ಬಾಯಲ್ಲೂ ಜೇನಿತ್ತು....
 

Thursday, November 6, 2014

ಹೊರಟೆ ಅರಸಿ...





            

     ನಾ ಹೊರಟೆ ಅರಸಿ,
 
    ಪ್ರೇಮವ ಹೃದಯಗಳಲಿ
     ಪ್ರೀತಿಯ ನಯನಗಳಲಿ
     ಮಮತೆಯ ಬಂಧುಗಳಲಿ
     ಸಾಂತ್ವನವ ಮಿತ್ರರಲಿ
     ದೇವರ ಗುಡಿಗಳಲಿ...
     ಎಲ್ಲೋ ಎಡವಿರುವೆ
     ಯಾರೂ ಸಿಗಲಿಲ್ಲ ಆ ವಿಳಾಸಗಳಲಿ....

Wednesday, November 5, 2014

ಮೋಹ...




ಹೀಗೇ ಕಣ್ಣಾಮುಚ್ಚೆ ಆಡುತ್ತಾ
ಕಚಗುಳಿಯಿಟ್ಟು
ನಗೆಹೂವ ಬಳ್ಳಿಯಲಿ
ಅರಳಿಸು ಒಲವೇ ತಾಪವಾ...

ಮೈನೆರೆವೆ ಮೋಹಿಸಿಬಿಡು,
ಭಾವಗಳ ಮೇಲ್ಛಾವಣಿಯ
ಒಡೆದು ನೀ ಹಾರುವಾಗ
ನಾ ಸವರುವೆ ಇಬ್ಬನಿಯಾ...


 

Tuesday, November 4, 2014

ತವರ ಸಿರಿ...


ಅಭಿವೃದ್ಧಿಯ ಕಾನನದ ನಡುವೆ
ನಡೆದಿರುವೆ ಹೆಜ್ಜೆಯಿಟ್ಟು..
ದೊಡ್ಡಮ್ಮ ಚಿಕ್ಕಮ್ಮಂದಿರ ಸೆಳೆವ ಮುದ್ದು
ಆತಿಥ್ಯದಲಿ ಮೆರೆದರೂ,
ಕನ್ನಡಾಂಬೆಯ ಅಮೃತಸುಧೆಯ...
ಪಾನಕೆ ತಲೆದೂಗುವುದೀ ಮನವು....


ಹಳದಿ ಸೀರೆ, ಕೆಂಪು ಬೊಟ್ಟ ತೊಟ್ಟು
ಸಹ್ಯಾದ್ರಿಯ ಹಸಿರ ಮುಡಿದು ನಗುವ
ಜಾತಿಯ ಬೇಲಿಯಿರದ ಈ ರೂಪವತಿಯ ಬಸಿರಲಿ
ನಾವು ಆರೂವರೆ ಕೋಟಿ ಕೂಸುಗಳು....

ಚಂಗನೆ ಜಿಗಿಯುವ ಜಿಂಕೆಯ
ಕಾಲ್ಗೆಜ್ಜೆದನಿಯ ಹೊನ್ನ ನವಿರಾದ ರೋಮಾಂಚನ
ಅವಳ ಚರಿತೆ ಕಿವಿಗಿಳಿದರೆ..
ಕರುನಾಡ ಜೋಗದಸಿರಿಯೇ ಎದೆಗಿಳಿವುದು,
ತೂಗುವ ತುಂಬಿದ ರಾಗಿಯ ತೆನೆಯಂತೆ
ಮೈಮನವೂ ನುಲಿಯುವುದು
ಅವಳು ನನ್ನತ್ತ ಸುಳಿದರೆ....

ಹಿಗ್ಗಿರಲಿ - ಕುಗ್ಗಿರಲಿ
ಕುತಂತ್ರವಿರಲಿ - ಕಟ್ಟಪ್ಪಣೆಯಿರಲಿ
ಆಶಯದ ಅರಮನೆಯಲಿ
ಗಂಧದ ಘಮವ ಹೀರಿ ಬೆಳೆದ
ಶಿರದ ಉತ್ತುಂಗದಲಿ, ಕರುನಾಡ
ಪತಾಕೆಯ ಹಾರಾಟ ಚಿರವಾಗಿರಲಿ..
ಅಕ್ಷಯವಾಗಲಿ, ಮಂತ್ರವಾಗಲಿ ಕನ್ನಡ
ರಾರಾಜಿಸಲಿ, ಅಳಿಯದಿರಲಿ ವರ್ಣಮಾಲೆಯ ರಂಗವಲ್ಲಿ....

ಚಂದಿರ ನೀ ನೀಡು ತಂಪ
ಪ್ರಜ್ವಲಿಸಿ, ಅಲಂಕರಿಸು ನನ್ನ ತಾಯ
ಮುಡಿ ಮಲ್ಲಿಗೆಯಲ್ಲಿ..
ಕನ್ನಡಿಗರೇ ಬನ್ನಿ ಪೋಣಿಸಿ ಕಟ್ಟೋಣ
ಅಕ್ಷರಗಳ ಹಸಿರು ತೋರಣ ಬೆಳಕ ವಿಸ್ತಾರದಲ್ಲಿ..
ಮಹಾಮಾತೆಯ ಉತ್ಸವವಿಂದು
ಕನ್ನಡ ರಾಜ್ಯೋತ್ಸವವಾಗಲಿ ನಿತ್ಯೋತ್ಸವ ಎಲ್ಲರ ಎದೆಗೂಡಲ್ಲಿ..........
ಜೈ ಕರ್ನಾಟಕ ಮಾತೆ.......

---- ಅಕ್ಷತ. ಎನ್. ಗೌಡ ----

Saturday, October 25, 2014

ಮುಳ್ಳು...


ತೀರದ ನೌಕೆಗೆ ಕೈ ಚಾಚಿದೇ ಮನ
ನಿಲುಕದ ಪ್ರೀತಿಗೆ ಕಾತರಿಸಿದೇ ದಿನ..
ನಿತ್ಯ ಜಂಜಡದಲಿ ಸವೆಯುವ ಹೃದಯದಲಿ
ನಿನಗಾಗಿ ಗೆಳೆಯನೆ ಹೃನ್ಮನದ ಪೂಜನ....
 
ಎಷ್ಟು ನಾದಿದರೂ ನಾ ಕಟ್ಟಬಲ್ಲೆನೇ ಮರಳ ಗೂಡ
ಪ್ರತಿಷ್ಟಾಪಿಸಬಲ್ಲೆನೇ ಅದರೊಳಗೆ ಶಿವಲಿಂಗವ..
ನೆರವೇರದಾ ಅಭೀಷ್ಟದ ಸಿದ್ಧಿಗಾಗಿ
ಮೌಢ್ಯದ ಕೂಪದಿಂದ ಬಸೆದ ಕಣ್ಣೀರ ಅಭಿಷೇಕ
ದೈತ್ಯ ಮುಳ್ಳುಗಳಿಟ್ಟ ಮುಹೂರ್ತ, ಅವೇ ಸುತ್ತಮುತ್ತ....
 
ನೂರಾರು ಸಹಚರರು ಈ ಬಾಳ ಸಂತೆಯಲ್ಲಿ
ಕಡಲ ಪಥದಲ್ಲಿ ಒಂಟಿ ನಾನು ಪ್ರತಿ ಈಜಿನಲ್ಲಿ
ಕೈ ಹಿಡಿಯದ ದೂರ್ತರು ಮುಳುಗಿನಲ್ಲೂ..
ಕ್ರಮಿಸಲಾಗದ ಹೆಜ್ಜೆಗಳ ಸಂಕಲನ..
ನೆಲಕಚ್ಚಿದರೆ ಯಾರೂಬರರಿಲ್ಲಿ ಉಸಿರ ಭರಿಸಲು.....
 
ಬಿದ್ದರೆ ನೆಟಿಗೆ ಮುರಿವರು
ಹಾಳಾಗೆನುತ ಮೂತಿ ತಿರುವುವರು
ಸಾಲಾಗಿ ಹಲ್ಲುಮಸೆಯುತ್ತಾ ಕಾಗೆಗಳು ಪಿಂಡ ನುಂಗಲು..
ಸಾಕಿನ್ನು ಈ ಹೋರಾಟ, ಹುಸಿನಗೆಯ ತುಚ್ಛ ಜನ್ಮ,
ಕೊಳ್ಳಿಯಿಡು ಬೇಗ, ಮುಕ್ತಿ ಕೊಟ್ಟುಬಿಡು....

Wednesday, June 18, 2014

ಎಲ್ಲಿದೆ ನನ್ನ ಮನೆ...



ಎಲ್ಲಿದೆ ನನ್ನ ಮನೆ...??               
ಯಾರು ನನ್ನವರು..??
 
ಈಗಲಾದರೂ ಹೇಳು ದೇವ
ನಿನ್ನ ಗಂಡನ ಮನೆಯೇ
ನಿನ್ನದೆಂದು ಹೇಳಿ
ಕಟುಕರಿಗೆ ನನ್ನ ಕೊರಳಿಟ್ಟು
ಹೆತ್ತವಳೇ ಸಂಭ್ರಮಿಸಿದಳಲ್ಲಾ!!
ತವರು ಯಾಕಲ್ಲಾ ನನ್ನಮನೆ..??
 
ಮಗಳೇ ಎಂದು ಕರೆದೊಯ್ದು
ಮಾತುಮಾತಿಗೂ ಇದೆಯೇ
ಕಲಿತದ್ದೆಂದು ಹೀಯಾಳಿಸಿ,
ಪೀಡಿಸಿ, ಹಿಂಸಿಸಿ
ಉಪವಾಸ ಕೆಡುವಿದರಲ್ಲಾ!!
ಇವರು ಯಾಕಲ್ಲಾ
ನನ್ನವರು..??
 
ಉಳಿದವನೊಬ್ಬ ನನ್ನವ
ಕಂಠಪೂರ್ತಿ ಕುಡಿದು
ಬಿದ್ದು ಹೊರಳಿ ಒದ್ದಾಡಿ
ಬಂದು ಹೊಲಸುಲಿದು
ಜುಟ್ಟಿಡಿದು ಒದೆಯುವನಲ್ಲಾ!!
ಪತಿ ಯಾಕಲ್ಲಾ ಪರದೈವ..??
 
ಇಷ್ಟೆಲ್ಲದರ ಮಧ್ಯೆ ನೋವೊಂದೆಡೆ,
ಬಾಯಲ್ಲಿ ಅಯ್ಯೋ ಎಂದು
ಬೇರೆಲ್ಲೋ ಏನಿದೆಯೋ
ಎನ್ನುವ ಜಗವೊಂದೆಡೆ
ಕುಗ್ಗಸಿ ಸುಡುತಿದೆಯಲ್ಲಾ!!
ಹೇಳು ಎಲ್ಲಿದೆ ನನ್ನಮನೆ..??
 
ನೋಡು ಈ ಪುಟ್ಟ ಕೈಗಳು
ಮಾತ್ರ ನನ್ನವು...
ಬೃಹತ್ ವೃಕ್ಷದಂತೆ
ಆಸರೆಯನಿತ್ತಿವೆ ಬಾಳಲಿ...
ನನ್ನದೊಂದು ಪುಟ್ಟ "ಸೂರು"
ಅದರ ಎದೆಗೂಡಲಿ......

Monday, June 2, 2014

ಮೌನ ಮಾತಾದಾಗ...


ಸಂಗಾತಿಯೇ ನಿನ್ನ ಮೌನ ನನಗಿಷ್ಟ..!
ನಿನ್ನ ಕಣ್ಣ ಮಿಂಚು ನನ್ನ ಸೆಳೆವಾಗ,
ನನಗಾಗಿ ಹಾತೊರೆದು ಕಾಯುವಾಗ,
ನಾ ಬಂದಾಗ ಹುಸಿಮುನಿಸ ನೀ ತಳೆವಾಗ...!!
 
ಸೂಜಿಮೊನೆಯಂಥ ನಿನ್ನ ಕಣ್ಣುಗಳು ನನಗಿಷ್ಟ..!
ನನ್ನ ಕಣ್ಣೀರಿಗೆ ನಿನ್ನ ರೆಪ್ಪೆಗಳು ನೆನೆವಾಗ,
ಕಣ್ಣ ಸನ್ನೆಯಲ್ಲೇ ನನ್ನ ಬಳಿ ಕರೆವಾಗ,
ಕಣ್ಣ್ಮುಚ್ಚಿ ನನ್ನ ಕಣ್ಣುಗಳ ನೀ ಚುಂಬಿಸುವಾಗ...!!

ನಿನ್ನ ಬಾಹುಗಳ ಬಂಧನ ನನಗಿಷ್ಟ..!
ನನ್ನ ಬಳಸಿ ನಿನ್ನ ಎದೆಬಡಿತ ಏರಿದಾಗ,
ಹೋಗೊಡದೆ ನನ್ನೆಳೆದು ನಿನ್ನಲ್ಲೇ ಬಂಧಿಸುವಾಗ,
ನಿನ್ನ ಶಕ್ತಿಗೆ ನಾ ಸೋತು ನೀರಾದಾಗ...!!

ತಂಗಾಳಿಯು ನನ್ನಂತರಾಳವ ಝಲ್ಲೆನಿಸುವಾಗ..!
ಮೇಘನು ಭೋರ್ಗೊರೆದು ನನ್ನ ಸಂಯಮ ಕಸಿಯುವಾಗ..!
ಸಾಗರದ ಅಲೆಗಳು ಬಂದೆನ್ನಪ್ಪಳಿಸಿದಂತಾದಾಗ
ನಿನ್ನ ಸಾಮೀಪ್ಯವನೇ ಬಯಸುವ ಹೃದಯಕೆ
ನೀನಿಷ್ಟ..!! ನೀನಿಷ್ಟ..!! ನೀನಿಷ್ಟ..!!

Saturday, May 24, 2014

ನಿಸ್ವಾರ್ಥವಿರಲಿ...

ನಿಸ್ವಾರ್ಥವಿರಲಿ ನಿನ್ನ ನೆರವಲಿ, ಪರೋಪಕಾರದಲಿ.!
ಕಾಯದಿರು ಫಲ ನಿರೀಕ್ಷೆಯಲಿ...
ಮಾಡಿದ ಕರ್ಮವು ಕಳೆದುಹೋಗುವುದು..!
ಮನನವಿರಲಿ, ಬಿಟ್ಟ ಬಾಣವು ಎಂದೆಂದೂ
ಪುನಃ ಬತ್ತಳಿಕೆಗೆ ಮರಳಿಬರದು..!!

ಎಲ್ಲರಿಗೂ ಆದರ್ಶ ನೀನಾಗಿ
ನಿನ್ನ ಕಾಯಕವ ನೀಮಾಡುತ
ಮುನ್ನಡೆಯಬೇಕು ಎಂದೂ ಕಂಗೆಡದೆ..!
ಬಾರದ ಮಳೆಗೆ ಮರುಗುತ್ತಾ ತಲೆಮೇಲೆ
ಕೈ ಹೊತ್ತು ಕುಳಿತರೆ ಬರವೇ ನಿನಗೆ..!!

ದಿಟ್ಟ ನಡೆಯಿರಲಿ, ನೇರ ನುಡಿಯಿರಲಿ,
ಅನ್ಯ - ಪರರೆಂಬ
ತಾರತಮ್ಯವಿರದಿರಲಿ ಎಂತೆಂದರೆ;
ಪ್ರತಿಪಲಿಸಬೇಕು ನಿನ್ನ ವ್ಯಕ್ತಿತ್ವ
ಕಠೋರ, ತೀಕ್ಷ್ಣವಾದರೂ ಪ್ರಿಯವಾಗುವ ಅಮೂಲ್ಯ ವಜ್ರದಹಾಗೆ..!!

ನಿನ್ನೆಲ್ಲಾ ಸಹಾಯಗಳ ನೆನಪುಗಳನು
ಗಂಟುಕಟ್ಟಿ ದೂರದ ಜಗದಲಿಹೂತಿಟ್ಟು ಮರೆತುಬಿಡು..!
ದಯೆಯೇ ಧರ್ಮದ ಮೂಲವೆಂದೆನುವಂತೆ
ನಿನ್ನ ಮೇಲೆ ನೀನೇ ದಯೆತೋರಿದಾಗಲಷ್ಟೇ
ಪ್ರೇಮಜ್ಯೋತಿಯ ಬೆಳಗುತ್ತಾ
ಧರ್ಮ ಮಾರ್ಗದಲಿ ಮುನ್ನುಗ್ಗಬಹುದು ಎಳೆ ಮಗುವಂತೆ...!!

Thursday, May 15, 2014

ಅವಳು...

ಅವಳಾ... ಆ
ಪುಟ್ಟ ಹುಡುಗಿಯ ಕಂಗೊಳಿಸುವ
ಮುಗ್ಧ ನಗುವು, ನನಗಾಗಿ
ಹೆಣೆದ ಮಾಯಾಜಾಲದಿ
ಸಿಲುಕಿದ್ದ ನನ್ನೊಳಗೆ
ಅವಳದೇ ಚಿತ್ತಾರ ಮೂಡಿಸಿತ್ತು!!
ಆ ಚಕೋರಿಯ ತುಂಟಾಟಗಳು
ಭಾವನೆಗಳಲಿ ಬಂಧಗಳ ಬೆಸೆದಿತ್ತು!!

ಬೆರಗಾಗಿದ್ದೆ ಅವಳ ನೋಟಕೆ
ಆ ನಯನಕೆ
ಆತ್ಮಸ್ಥೈರ್ಯದ ಚಿಲುಮೆಯಂತಿದ್ದ
ದಿಟ್ಟ ದೃಷ್ಟಿಗೆ!!
ಕಣ್ಗಳೋ! ಕೋಲ್ಮಿಂಚೋ!!
ನೇರ ನಾಟಿತ್ತೆದೆಗೆ!
ನನ್ನ ವ್ಯಕ್ತಿತ್ವವನೇ ಮರೆಸಿ
ಮುತ್ತಿಡುವಂತೆ ಮಾಡಿತ್ತು...

ಮಹಲಾದರೇನು..? ಗುಡಿಸಿಲಾದರೇನು..?
ಕೋಟಿ ಕೊಡದಿದ್ದರೇನು..?
ನಗುವಿಗೆ ಯಾವುದೇ
ಹಂಗಿಲ್ಲದಿರುವಾಗ
ಯಾವ ಕೊರತೆಯಿದ್ದರೇನು..?
ಪರಮೈಶ್ವರ್ಯದೊಡತಿಯು
ಇವಳು ಸೌಂದರ್ಯವತಿ!
ನನ್ನ ಮಗಳಾಗದಿದ್ದರೇನು..?

ಮುತ್ತು ಮಣಿಗಳನ್ನ
ಒಂದೊಂದಾಗಿ ಹೆಕ್ಕಿ
ಪೋಣಿಸಿದಂತಾ ಆ ಹಲ್ಲುಗಳ
ದಿನವೂ ಲಂಚಕೊಟ್ಟು ಬಿರಿಸಿ
ಸಂತಸಪಡುತ್ತಿದ್ದೆ ಅಂದು..
ಬೇರೊಂದು ಮಗುವ
ಈ ಪಟದೊಳಗ್ಹೊಕ್ಕು
ಅವಳ ನೆನಪಾಗಿ ಬರೆದಿರುವೆ
ಸಮರ್ಪಣೆ ಅವಳಿಗೆಂದು....

Tuesday, April 29, 2014

ಸಮಯನಿಷ್ಟೆ...

ಸಮಯ
ಸಮಯ
ಸಮಯ.....
ಜಾರುತಿದೆ ಕೈಯಿಂದ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ವಿಭಿನ್ನ ಶೃತಿಯ....

ಬಾಲ್ಯದಿ ಬೆಳೆವಾಸೆ
ಬೆಳೆದು ಅಮ್ಮನ ಸೀರೆಯಾಸೆ
ಉದ್ದನೆಯ ನೀರ್ಜಡೆಯಾಸೆ
ಕೈಬಳೆ ತೊಟ್ಟು ಕುಲುಕುವಾಸೆ
ಜುಮುಕಿ, ಕಾಲ್ಗೆಜ್ಜೆ, ಮಲ್ಲಿಗೆಯಾಸೆ
ಹೋ... ಈ ಲಜ್ಜೆ... ಆದರೂ
ಎಲ್ಲರ ಹೊಗಳಿಕೆಯಾಸೆ.....

ಸಮಯವೇ ತಂದಿತ್ತು
ಯೌವನವ ಉಡುಗೊರೆಯಾಗಿ
ಅದು, ಇದು ಎನುವುದರಲೇ
ಮಾಡಿ ಮಧುಮಗನ ಸಂಗಾತಿಯಾಗಿ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ಮೋಹಕ ಶೃತಿಯ....

ಬಾಳಲ್ಲವನ ಬೆಳಕಾಗುವಾಸೆ
ಪ್ರಿಯಕರನ ಮುದ್ದಿನ ಕಣ್ಮಣಿಯಾಗುವಾಸೆ
ಅವನ ತೋಳಲ್ಲಿ ಜಗಮರೆಯುವಾಸೆ
ಬೈತಲೆಯಲಿ ಕುಂಕುಮದಾಸೆ
ಕಾಲುಂಗುರ, ಮಾಂಗಲ್ಯ ಧರಿಸಿ ಮೆರೆಯುವಾಸೆ
ಹೋ... ದೊಡ್ಡವಳು... ಆದರೂ
ನಲ್ಮೆಯ ಹೊಗಳಿಕೆಯಾಸೆ......

ಸಮಯವೋ ಸಾಗಿದೆ
ಮರೆಯದೆ ಕರ್ತವ್ಯನಿಷ್ಠೆಯ
ಬರೆಯುತ್ತಾ ಬಾಳ ಕೃತಿಯ
ಬೆರೆಸುತ್ತಾ ಬಾಳಲ್ಲಿ ಒಲವಿನ ಶೃತಿಯ....

Saturday, April 26, 2014

ಅನ್ನದಾತ...

ಹುಂಜ ಕೂಗಿದ್ ಕೂಡ್ಲೇ
ಕೊಡವಿಕೊಂಡೆದ್ದ ಜುಂಜ
ಮುರ್ಕೊಂಡು ಬೇವ ಕಡ್ಡಿ
ತೀಡುತ್ತ ಹಲ್ಲು ಬಾಯ
ಶುರಚ್ಕೊಂಡ ಹೊಲ್ದ್ಯಾಗ್ ಕ್ಯಾಮಿ
ಹೊಡ್ದು ಮಜ್ಗೆ ಗಂಜಿಯ....

ಹೆಂಡ್ರು ಹೊತ್ತು ತಂದ
ಉಪ್ಸಾರು ಸೊಪ್ಪಿನೊಡನೆ
ಮುದ್ದೆ ಮುರಿದು ನುಂಗ್ದ
ಮೆಣಸ್ಕಾಯಿ ನೆಂಚಿಕೊಳ್ತ
ನಂಜೀಯ ಕೈ ಹಿಡ್ದು
ಕಣ್ಹೊಡ್ದು ಹಲ್ಲ ಬಿರಿದ....

ದಿನ್ವೆಲ್ಲ ದಣೀದೆ ಗೇದು
ಬೆವ್ರ ಸುರ್ಸಿ ಮೂಳೆಯಾದ್ರೂ
ಮುಖದಾಗೆ ತೇಜವಂತ
ಸೂರ್ಯಂಗು ಗೋಲಿ ಹೊಡ್ದ
ಮಳ್ಯಾಗೆ ಹಿಗ್ಗಿ ಕುಣಿದು
ಕಣಜಾವ ಜಡಿದು ತುಂಬಿ
ದೇಶಾದ ಹೊಟ್ಟೆ ಹೊರ್ದ
ನಮ್ಮೆಲ್ರ ಅನ್ನದಾತ....

ಹರಸ್ರೀ ನೀವೂ ಇವ್ನ
ತಣ್ಣಗಿರ್ಲಿ ಅಂತ....

ಹಕ್ಕಿಗಳಿಗೊಂದು ತುತ್ತು...

ರೆಕ್ಕೆ ಇದ್ದರೆ ಸಾಕೇ......
ಹಕ್ಕಿಗೆ ಬೇಕು ಬಾನು
ಹೊಟ್ಟೆಗೆ ಹೂವು ಹಣ್ಣು
ಬಾಯಿಗೆ ಗುಟುಕು ನೀರು
ಬದುಕೋಕೇ...
ಮರಳಿ ಬರೋಕೇ...
ಇಂಪ ಹರಡೋಕೇ.......

ಪಕ್ಷಿಗಳು ಬೆಂಗಳೂರಿಗೆ ಬರುತ್ತಿಲ್ಲ..
ಕಾರಣ ಏನೋ ಗೊತ್ತಿಲ್ಲ..

     ಮರಗಳ ಸಂಖ್ಯೆ ಕ್ಷೀಣಿಸುತ್ತರುವುದೇನೋ ನಿಜ, ಪಕ್ಷಿಗಳಿಗೆ ತಾವಿಲ್ಲ. ಆದರೆ ಇರುವ ಮರಗಳಲ್ಲೂ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಅಲ್ಲಲ್ಲಿ ಕೆರೆ ಕೊಳಗಳಿದ್ದರೂ ನೀರು ಕಲುಷಿತಗೊಂಡಿದ್ದು ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲ. ಇದೇ ಯೋಚನೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು.

    ಕೆಲವರು ಅನೇಕ ಉತ್ತಮ ಪರಿಹಾರ ಸೂಚಿಸಿದ್ದಾರೆ. ಮನೆಯ ಹೊರಗೆ ನೀರಿಡುವುದು, ಸಣ್ಣ ದಾನ್ಯ ಇಡುವುದು ಇತ್ಯಾದಿ. ನಾನೂ ಅನುಸರಿಸಿ ಪ್ರಯೋಜನ ಆಗಿದ್ದೇನೋ ನಿಜ. ಆದರೆ ಇದು ಶಾಶ್ವತ ಪರಿಹಾರವಲ್ಲ ಅನಿಸಿತು. ಎಲ್ಲರೂ ಇದನ್ನು ಅನುಸರಿಸಲು ಆಗದಿರಬಹುದು. ಮರೆತೇ ಹೋಗಬಹುದು.

     ಬಹಳ ದಿನಗಳಿಂದ ಹೀಗೇ ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದು ಮುಖ್ಯವಾದ ಅಂಶ. ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದ್ರೂ ಎಲೆ ಭರಿತ, ಇಲ್ಲವೇ ಹೂ ಬಿರಿದ ಮರಗಳು ಮಾತ್ರ ಇವೆ. ಹೀಗಾದಲ್ಲಿ ಪಕ್ಷಿಗಳು ತಿನ್ನುವುದಾದರೂ ಏನು? ನೀವೇ ಕಂಡಂತೆ ಮೊದಲು ಊರ ತುಂಬಾ ಆಲದ, ಅರಳಿ ಮುಂತಾದ ಮರಗಳಿದ್ದು, ಅಲ್ಲಿನ ಹಣ್ಣುಗಳು ಹಲವು ಪಕ್ಷಿಗಳ ಆಧಾರವಾಗಿತ್ತು. ಹಕ್ಕಿ ಗೂಡಿಗೆ ಆಶ್ರಯವಾಗಿದ್ದವು ಮರಗಳು. ಬದಲಾದ ಪರಿಸ್ಥಿತಿಗೆ ಮೇವಿನ ಅಭಾವವೂ ಒಂದು ಮುಖ್ಯ ಕಾರಣವಿರಬಹುದೇನೋ ಅನಿಸಿತು.

     ಇಂದಿಗೂ ಮನೆಯ ಮುಂದಿನ ಮರಗಳಲ್ಲಿ ಹಕ್ಕಿಗಳು ಹಣ್ಣು ತಿಂದು ಮನೆಯಂಗಳದಲ್ಲಿ ಗಲೀಜು ಮಾಡುತ್ತವೆಂದು ಮರವನ್ನೇ ಕಡಿದು ಹಾಕುತ್ತಲೇ ಇದ್ದಾರೆ. ಹಕ್ಕಿಗಳು ನೆಲೆಯಿಲ್ಲದೆ, ಹೊಟ್ಟೆ ಪಾಡಿಗಾಗಿ ವಲಸೆ ಹೋಗಲಾರಂಬಿಸಿವೆ.

      ಅದಕ್ಕೆ ನಿರ್ಧರಿಸಿದೆ ಪಕ್ಷಿಗಳಿಗೆ ಉಪಯೋಗವಾಗುವ ಗಿಡ ನೆಡಬೇಕೆಂದು. ಈಗ ಸಸಿಯನ್ನು ನೆಟ್ಟಿದ್ದೇನೆ ಮನೆಯ ಎದುರಲ್ಲಿ. ನೀರಿಡುವುದು, ಆಹಾರಕ್ಕಾಗಿ ಕಾಳು, ರಾಗಿ ಮುಂತಾದ ಬೀಜಗಳನ್ನು ಇಡುವುದನ್ನೂ ಮುಂದುವರೆಸಿದ್ದೇನೆ. ಇತರರಿಗೂ ತಿಳಿಸುತಿದ್ದೇನೆ. ನೀವೂ ಸಹಕರಿಸುತ್ತೀರಿ ಎಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳುವ ಉತ್ಸಾಹ ನನ್ನಲ್ಲಿ...

ಹಂಬಲ...

ನನ್ನಂತರಾಳದಿ ಅರಳಿದೆ
ನೀನು ಹೂವಂತೆ
ಬೇರೇನಾದರೂ ಆಗಬಾರದಿತ್ತೇ
ಮುದುಡದ ಸೂರ್ಯಕಾಂತಿಯಂತೆ...

ಸೋಲು...

ತಣ್ಣಗಾಗಿದೆ
ನಾಡಿ ಬಡಿತವು...
ನನ್ನಲ್ಲಿನ್ನೂ ಉಳಿದಿದೆ
ಬದುಕಲಾಗದಷ್ಟು ಉಸಿರು....

ಎಲ್ಲೋ ಕಂಡಂತೆ ನಿನ್ನನ್ನು...

ಎಲ್ಲೋ ಕಂಡಂತೆ
ನಾನು ನಿನ್ನನ್ನು
ಏಕೋ ಕಾಡುತೀ
ಹಗಲಿರುಳೂ ನನ್ನನ್ನು
ಏತಕೋ ನನ್ನಲೀ ಈ ರೀತೀ
ತುಂಬಿದೆ ನಿನ್ನದೇ ಪ್ರೀತೀ....

ಹಾಡಾದೆ ಮನದಲ್ಲೀ
ಬಂದಿಳಿದೇ ಕನಸಲ್ಲೀ
ನೂರೆಂಟು ಭಾವಗಳಾ
ಝೇಂಕಾರ ನುಡಿಸುತಲೀ
ಏತಕೋ ನನ್ನಲೀ ಈ ರೀತೀ
ತುಂಬಿದೇ ನಿನ್ನದೇ ಪ್ರೀತೀ....

ನೀನಿಂತೆ ಹೃದಯದಲೀ
ವಸಂತವು ಬಾಳಲ್ಲೀ
ನೂರೆಂಟು ಹೂವುಗಳಾ
ಸುಗಂಧವ ಬೀರುತಲೀ
ಏತಕೋ ನನ್ನಲೀ ಈ ರೀತೀ
ತುಂಬಿದೇ ನಿನ್ನದೇ ಪ್ರೀತೀ....

ಮಿತ್ರದ್ರೋಹಿ...

ನನ್ನ ಬೆರಳನ್ನೇ
ಹಿಡಿದು
ಮೇಲೇರ ಬಯಸಿದ
ನಿನಗೆ ನಾನೇ
ಮುಳ್ಳಾಗಿ ಕಂಡರೆ
ತಪ್ಪು ನನ್ನ ಕರುಣೆಯೋ
ಇಲ್ಲಾ ನಿನ್ನ ಮನದ ಕಿಚ್ಚೋ...??

ಬೇಡ, ಮಾಡದಿರು
ಗೆಳತಿ
ನೀನು ನನ್ನಿಂದ
ಕಲಿಯಬೇಕಾದ್ದು ಬಹಳಷ್ಟಿದೆ
ನನ್ನೊದೆದರೆ
ಆದೀಯೆ
ಅರೆ ಬೆಂದ ಮಡಕೆ....!!

ಹೃದಯಾಘಾತ...

ನವಿಲಂತೆ ನಲಿದದ್ದಷ್ಟೇ
ನೆನಪು
ನನ್ನೊಳಗೇನೋ ದುಗುಡ
ನನಗರಿವಿಲ್ಲ
ದಡಕ್ಕನೆ ಕುಸಿದು ಬಿದ್ದಂತ್ತೊಂದು
ತುಂಡು
ಮುಷ್ಟಿಗಾತ್ರದ್ದು
ವಿಕಾರ, ವಿಕೃತ ದೃಶ್ಯ
ಅಡ್ಡಡ್ಡ ಉದ್ದುದ್ದ
ಮನಬಂದಂತೆ
ಸೀಳಿದವರ್ಯಾರೋ ಇದ
ಆಗತಾನೇ ಕಿತ್ತ ಗೂಡಿಂದ
ಜಿನುಗುವ ಜೇನಂತೆ
ಹರಿಯುತಿದೆ
ಅದೇನೋ ಕೆಂಪಗೆ
ಹೊಲಸು ತಾಕಿತ್ತೇನೋ
ನಾಸಿಕವೂ
ಬಿಗಿಹಿಡಿದಿತ್ತು ಉಸಿರ
ಆದರೆ
ಅಲುಗಾಡಿಸದೆ
ಬೊಕ್ಕಸದಲ್ಲಿರಿಸಿ ಜೋಪಾನವಾಗಿ
ಎಳನೀರ ತಲೆಕೊಚ್ಚಿ
ಚಿಪ್ಪ ತೆಗೆವಂತೆ
ಯಾಕ್ಹೀಗೆ..... ಆಆಆಆಹ್...ಅಹ್

(ಕಣ್ಣುಗಳು ಮುಚ್ಚಿದವು)

ಚಿಟ್ಟೆಯಾಗಿ...

ನಿನ್ನ ನೆನಪೇ
ಕಾಡುತ್ತಿದೆ 
ಸುಪ್ತ
ಜ್ವಾಲಾಮುಖಿಯಾಗಿ..
ಕಡಿವಾಣವೆಲ್ಲವ ಕಳಚಿ
ಹಾರಿಬಂದಿರುವೆ
ನಿನಗಾಗಿ,
ಚಿಟ್ಟೆಯಾಗಿ....

ನಗೆ ಸಿಂಚನ...

ಅಪ್ಪ ಮಕ್ಕಳ
ಊರಗಲ
ಬಿರಿದ ಮೊಗದಲ್ಲಿ
ಬಾಯ್ತುಂಬಿ
ಚಿಮ್ಮುವ ನಗು,
ನಿತ್ಯವೂ ರೋಮಾಂಚನ...
ಅನುಕ್ಷಣವೂ ಸಂತಸದ ಸಿಂಚನ...

ಇಬ್ಬನಿ...

ಹನಿಯಾಗಿ
ಮೂಡಿ
ಗಾಳಿಯಲಿ
ನಯವಾಗಿ ಬೆರೆತು
ತಂಪನೀವ ಇಬ್ಬನಿಯು
ಪುಟ್ಟ ಹುಲ್ಲಿನ
ಜೊಲ್ಲು....

ಭಾವ ಸಾಗರದಲ್ಲಿ...

 
ಅಬ್ಬರಿಸಿದೆ ಈ ಹೃದಯ
ಮೈ ಮನಗಳ,
ಶಾಂತತೆಯ ಎಲ್ಲೆಮೀರಿ..
ಹೃದಯವೋ, ಒಡಲಾಳದಿ ಅಡಗಿ
ರೊಚ್ಚೆದ್ದ ಭಾವನೆಗಳ ಸಾಗರವೋ
ನೇಸರನ ಪ್ರಚೋದನೆಯೋ...
 
ಸುನಾಮಿ ಅಲೆಯಂತೆ
ಉಬ್ಬರಿಸಿ ಚಾಚುತ್ತಿದೆ
ಕರಣಗಳ ಪ್ರೀತಿಯತ್ತ..
ಅಲೆಯೋ, ಮನದಾಳದಿ ಬಲಿತು
ತೊಳಲಿರುವ ಕಾಮನೆಗಳ ಅಳಲೋ
ವಿರಹ ವೇದನೆಯೋ....
 
ಪ್ರವಹಿಸುತಿದೆ ರಭಸದಿ
ಕಡಲೊಡಲ ಮುತ್ತಿನಮಾಲೆ
ತೊಯ್ದಿಹಳು ಪ್ರೇಮಸಿಂಚನದಿ ಕುಸುಮಬಾಲೆ..
ಆತ್ಮಮಂಥನದ ಸುಳಿಯಲ್ಲಿ
ಮತ್ತದೇ ದ್ವಂದ್ವ,
ಕಂಪನವಿದು ವ್ಯಾಮೋಹವೋ
ಇಲ್ಲಾ ನಿಸರ್ಗದ ಸೊಗಸೋ..

Friday, April 25, 2014

ಅಮೃತಧಾರೆ...

ಮೈತುಂಬಿ ಜಲಲೆಯು
ವೈಯ್ಯಾರದಿ ನಡೆದಿಹಳು
ಕುಲಕುತ್ತಾ, ಬಳುಕುತ್ತಾ
ಹಾವಂತೆ.....
ಯಾರ ಹಂಗಿಲ್ಲದೇ
ಉಸಿರಾಗಿ ಪೊರೆವಳು
ಕೋಟಿ ಜನುಮವನೂ
ತಾಯಂತೆ.....
ಸಹ್ಯಾದ್ರಿಯಿಂದ ಇವಳ
ಕಾಡಿ ಬೇಡಿಯಾದರೂ
ನನ್ನಂಗಳಕೆ ತರುವಾಸೆ
ಭಗೀರಥನಂತೆ.....
ಯಾವ ದೇವರೋ
ಏನವನ ಸೃಷ್ಟಿಯೋ
ಸರಿಸಾಟಿ ಬೇರಿಲ್ಲ ಈ
ಅಮೃತಧಾರೆಯಂತೆ....